
ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಶಕ್ತಿದೇವತೆ, ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿ (Hasanamba Temple) ಗರ್ಭಗುಡಿ ಬಾಗಿಲು ಇಂದು (ದಿನಾಂಕ ನಮೂದಿಸಿ) ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಮುಚ್ಚಲಿದೆ.
ಈಗಾಗಲೇ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನವು ಅಂತ್ಯಗೊಂಡಿದ್ದು, ಪೂಜಾ ಕೈಂಕರ್ಯಗಳಿಗಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ಬಳಿಕ ಧಾರ್ಮಿಕ ವಿಧಿಗಳೊಂದಿಗೆ ಬಾಗಿಲು ಮುಚ್ಚಲಾಗುತ್ತದೆ. ಇಂದು ಬೆಳಗಿನ ಜಾವದವರೆಗೂ ಜಿಲ್ಲಾಡಳಿತವು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಕಡೆಗಳಿಗೆಯಲ್ಲೂ ಭಕ್ತಗಣವು ಸರತಿ ಸಾಲಿನಲ್ಲಿ ನಿಂತು ಹಾಸನಾಂಬ ದೇವಿಯನ್ನು ಕಣ್ತುಂಬಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜಿತಾ, ಎಸಿ ಮಾರುತಿ ಅವರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಬಾಗಿಲು ಮುಚ್ಚುವ ಮುನ್ನ ದೇವಾಲಯದ ಪ್ರಧಾನ ಅರ್ಚಕರು ದೀಪ ಹಚ್ಚಿ, ದೇವಿಯ ಮುಂದೆ ಹೂವು, ನೈವೇದ್ಯವನ್ನು ಇಡಲಿದ್ದಾರೆ. ಇದರ ನಂತರ ವಿಧಿವತ್ತಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.
27 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, 23 ಕೋಟಿ ಆದಾಯ:
ಅಕ್ಟೋಬರ್ 9 ರಂದು ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಈ ಬಾರಿ ಜಾತ್ರಾ ಮಹೋತ್ಸವದ ಅವಧಿಯಲ್ಲಿ 27 ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. 1,000 ರೂ, 300 ರೂ, ಲಾಡು ಪ್ರಸಾದ ಹಾಗೂ ದೇವಿಯ ಸೀರೆ ಮಾರಾಟದಿಂದ ದೇವಾಲಯಕ್ಕೆ 23 ಕೋಟಿಗೂ ಅಧಿಕ ಆದಾಯ ಬಂದಿದ್ದು, ಈ ಬಾರಿಯ ಜಾತ್ರಾ ಮಹೋತ್ಸವ ಹೊಸ ಇತಿಹಾಸ ಬರೆದಿದೆ.
ಇದಲ್ಲದೆ, ರಾತ್ರಿಯಿಡೀ ಸುರಿದ ಭಾರಿ ಮಳೆಯ ಪರಿಣಾಮವಾಗಿ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ ತಡವಾಗಿದೆ. ಕೆಂಡ ಹಾಯಲು ಸಾವಿರಾರು ಮಂದಿ ಭಕ್ತರು ಕಾದು ನಿಂತಿದ್ದರು.