ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ನಗರದಲ್ಲಿ ಕಸದ ನಿರ್ಮೂಲನೆ ಅಸಾಧ್ಯ ಎಂದು ಸಾರಿಗೆ ಸಚಿವರು ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ  ತಿಳಿಸಿದರು. 

  • ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ನಗರದಲ್ಲಿ ಕಸದ ನಿರ್ಮೂಲನೆ ಅಸಾಧ್ಯ
  • ಬಿಟಿಎಂ ಲೇಔಟ್ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಆಡುಗೋಡಿ
  • ಸಾರಿಗೆ ಸಚಿವರು ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ  ಹೇಳಿಕೆ

ಬೆಂಗಳೂರು: ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ನಗರದಲ್ಲಿ ಕಸದ ನಿರ್ಮೂಲನೆ ಅಸಾಧ್ಯ ಎಂದು ಸಾರಿಗೆ ಸಚಿವರು ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ  ತಿಳಿಸಿದರು. 

ನಿನ್ನೆ ಬಿಟಿಎಂ ಲೇಔಟ್ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಆಡುಗೋಡಿಯಲ್ಲಿ “ಅರೆ ಸ್ವಯಂಚಾಲಿತ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ” ಹಾಗೂ “ಕಸ ಕಿಯೋಸ್ಕ್” ಅನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ತ್ಯಾಜ್ಯ ನಿರ್ಮೂಲನೆಗಾಗಿ ಜನರ ಸಹಕಾರ ಅತ್ಯಗತ್ಯ. ಜನರು ಎಲ್ಲೆಂದರಲ್ಲಿ ಕಸ ಬಿಸಾಡದೆ, ಸ್ವಚ್ಛ ಬೆಂಗಳೂರನ್ನು ನಿರ್ಮಿಸುವಲ್ಲಿ ಭಾಗಿಯಾಗಬೇಕಾಗಿ ಮನವಿ ಮಾಡಿದರು.

ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ ದ್ವಿತೀಯ ಹಂತದ ಟ್ರಾನ್ಸಫರ್ ಸ್ಟೇಷನ್ ಅನ್ನು ನಿರ್ಮಿಸಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಅದಲ್ಲದೆ ಕೋರಮಂಗಲದಲ್ಲಿ ಕಸ-ರಸ ಘಟಕ, ಎಲೆ ಸಂಸ್ಕರಣಾ ಘಕಟವು ಕೂಡಾ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.

ಕೆಲ ನಾಗರೀಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಈಗಾಗಲೇ ತಮ್ಮ-ತಮ್ಮ ಹಂತದಲ್ಲಿಯೇ ಕಸ ಸಂಸ್ಕರಣೆ ಮಾಡಿದ್ದು, ಗೊಬ್ಬರವನ್ನು ರೈತರಿಗೆ ವಿತರಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲಾ ನಾಗರಿಕರು ಮನೆಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ತಮ್ಮ ಮನೆಗಳಲ್ಲಿಯೇ ಸಂಸ್ಕರಣೆ ಮಾಡಿದರೆ ಕಸ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ತಿಳಿಸಿದರು.

ಸರಿಯಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರರಿಗೆ ದಂಡ ವಿಧಿಸಿ:

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಅವರಿಗೆ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳಲು ಆಯುಕ್ತರಿಗೆ ಸೂಚನೆ ನೀಡಿದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕರೀಗೌಡ ರವರು ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ ಬ್ಲ್ಯಾಕ್ ಸ್ಪಾಟ್ ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಕಸ ಕಿಯೋಸ್ಕ್ ಸ್ಥಾಪಿಸಲು ಮುಂದಾಗಿರುವುದಾಗಿ ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ 65 ಕಸ ಕಿಯೋಸ್ಕ್ ಸ್ಥಾಪಿಸಲು ಯೋಜನೆ:

ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದ್ದು, ನಗರದಾದ್ಯಂತ ಸುಮಾರು 76 ಕಸ ಕಿಯೋಸ್ಕ್ ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಕಸ ಕಿಯೋಸ್ಕ್ ನಿಂದ ಸ್ಥಳಿಯವಾಗಿ ಬ್ಲಾಕ್ ಸ್ಪಾಟ್ ಗಳ ನಿರ್ಮೂಲನೆ, ತ್ಯಾಜ್ಯ ದುರ್ವಾಸನೆ ಸೇರಿದಂತೆ ಇತರ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.

ಪ್ರತಿ ಕಸ ಕಿಯೋಸ್ಕ್ ನಲ್ಲಿ 100 ಲೀಟರ್ ಸಾಮರ್ಥ್ಯದ ನಾಲ್ಕು ಸಂಗ್ರಹಣಾ ಬಿನ್ ಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ತಮ್ಮ ಬೇರ್ಪಡಿಸಿದ ಕಸವನ್ನು ಯಾವುದೇ ಶುಲ್ಕವಿಲ್ಲದೆ ಈ ಕಿಯೋಸ್ಕ್  ಗಳಿಗೆ ಉಚಿತವಾಗಿ ನೀಡಬಹುದಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್ ರವರು ಮಾತನಾಡಿ, ಕೋರಮಂಗಲದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಕಾಂಪೋಸ್ಟ್ ವ್ಯವಸ್ಥೆಯನ್ನು ಮಾಡಿಕೊಂಡು ಸ್ಥಳೀಯವಾಗಿ ತ್ಯಾಜ್ಯ  ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಇದನ್ನು ಮಾದರಿಯಾಗಿಟ್ಟುಕೊಂಡು ಸ್ಥಳೀಯವಾಗಿ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಂಡಲ್ಲಿ ಬಹುಪಾಲು ಕಸದ ಸಮಸ್ಯೆಗಳಿಗೆ ಮೂಲದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಈ ಸಂಬಂಧ ನಾಗರಿಕರಲ್ಲಿ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣಕ್ಕೆ ಜಾಗ ಗುರುತು:

ಬಿಟಿಎಂ ಲೇಔಟ್ ನ 4 ನೇ ಹಂತದಲ್ಲಿ ಸುಮಾರು 4 ಎಕರೆಯ ಜಾಗವನ್ನು ಟ್ರಾನ್ಸಫರ್ ಸ್ಟೇಷನ್ ನಿರ್ಮಿಸಲು ಗುರುತಿಸಿದ್ದು, ಆ ಸ್ಥಳ ಹಸ್ತಾಂತರ ಮಾಡುವ ಸಲುವಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಸಿ.ಎಸ್.ಆರ್ ಬಳಸಿ ಬಳಸಿ ಅಭಿವೃದ್ಧಿ:

ಸಿ.ಎಸ್.ಆರ್ ಅನುದಾನ ಬಳಸಿ ಪ್ರತಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿಯೂ ಒಣ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಿಸುವ ಸಲುವಾಗಿ ಸಾಧ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. 

About The Author

By Admin

Leave a Reply

Your email address will not be published. Required fields are marked *